ಪಾಟ್ನಾ: ನೇಮಕಾತಿ ಪತ್ರ ಪಡೆಯಲು ಬಂದ ಮುಸ್ಲಿಂ ವೈದ್ಯೆಯ ಹಿಜಾಬ್ ಹಿಡಿದೆಳೆದ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಅವರ ಪರವಾಗಿ ಅವರದ್ದೇ ಕ್ಯಾಬಿನೆಟ್ ಮುಸ್ಲಿಂ ಸಚಿವರೊಬ್ಬರು ಬ್ಯಾಟ್ ಬೀಸಿದ್ದಾರೆ.
ಹೌದು.. ನಿತೀಶ್ ಕುಮಾರ್ ಸಂಪುಟದ ಏಕೈಕ ಮುಸ್ಲಿಂ ಸಚಿವ ಮೊಹಮ್ಮದ್ ಜಮಾ ಖಾನ್ ಅವರು ಹಿಜಾಬ್ ವಿವಾದಕ್ಕೆ ಸ್ಪಷ್ಟನೆ ನೀಡಿದ್ದು, ‘ನಿತೀಶ್ ಕುಮಾರ್ ತಂದೆ ಸ್ವರೂಪರು.. ಮಗಳ ಮೇಲೆ ಪ್ರೀತಿ ತೋರಿದಂತೆ ಆಕೆಯ ಮೇಲೆ ತೋರಿದ್ದಾರೆ. ಇದರಲ್ಲಿ ಅಪಾರ್ಥ ಬೇಡ ಎಂದು ಹೇಳಿದ್ದಾರೆ.
‘ಘಟನೆಯನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ ಮತ್ತು ಅದನ್ನು ಅವಮಾನಕ್ಕೆ ಜೋಡಿಸುವುದು ದುರದೃಷ್ಟಕರ ಎಂದು ಜಮಾ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಪ್ರಕಾರ, ಇಡೀ ಘಟನೆಯು ಪಿತೃ ವಾತ್ಸಲ್ಯದ ಕುರಿತಾಗಿದೆ, ಯಾವುದೇ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿಲ್ಲ ಎಂದು ಹೇಳಿದ್ದಾರೆ.
‘ಇಂದಿನ ಕಾಲದಲ್ಲಿ ರಾಜಕೀಯದ ಮಟ್ಟವು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದು, ಪೂರ್ಣ ಸಂದರ್ಭವನ್ನು ಅರ್ಥಮಾಡಿಕೊಳ್ಳದೆ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ ಎಂಬುದು ಅತ್ಯಂತ ದುಃಖಕರ. ನಾಯಕರು ಏನು ಮಾತನಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಟೀಕೆಗೆ ಒಳಗಾಗುತ್ತಿರುವ ವ್ಯಕ್ತಿ ಬಿಹಾರದ ಮುಖ್ಯಮಂತ್ರಿ, ಅವರು ಎಲ್ಲಾ ಜಾತಿ, ಧರ್ಮ ಮತ್ತು ವರ್ಗಗಳ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಜಮಾ ಖಾನ್ ಹೇಳಿದರು.
ವೈರಲ್ ಆಗಿರುವ ವೀಡಿಯೊವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ ಮತ್ತು ಈ ಘಟನೆಯು ಅವಮಾನವಲ್ಲ, ಆದರೆ ತಂದೆಯ ಪ್ರೀತಿಯನ್ನು ತೋರಿಸುವ ಒಂದು ಮಾರ್ಗವಾಗಿದೆ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಚಿವ ಮೊಹಮ್ಮದ್ ಜಮಾ ಖಾನ್ ಸಿಎಂ ನಿತೀಶ್ ಕುಮಾರ್ ಬೆನ್ನಿಗೆ ನಿಂತಿದ್ದಾರೆ.
ಅಂತೆಯೇ ಘಟನೆಯ ಕುರಿತು ಮಾತನಾಡಿದ ಜಮಾಖಾನ್, ‘ಈ ವಿವಾದದ ಕೇಂದ್ರಬಿಂದು ಮಹಿಳೆ ಮುಖ್ಯಮಂತ್ರಿಗೆ ಮಗಳಿದ್ದಂತೆ. ನಿತೀಶ್ ಕುಮಾರ್ ಅವರ ನಡವಳಿಕೆ ಯಾವಾಗಲೂ ರಕ್ಷಕನ ನಡವಳಿಕೆಯಾಗಿರುತ್ತದೆ. ಅವರು ಬಿಹಾರದ ಮುಖ್ಯಮಂತ್ರಿ ಎಂದು ಯಾರಿಗೂ ಭಾವನೆ ಮೂಡಿಸುವುದಿಲ್ಲ, ಬದಲಿಗೆ ಜನರು ಮನೆಯಲ್ಲಿರುವಂತೆ ಮತ್ತು ಸುರಕ್ಷಿತವಾಗಿರುವಂತೆ ಮಾಡುತ್ತಾರೆ ಎಂದರು.
ಅಂತೆಯೇ ಸಚಿವರ ಪ್ರಕಾರ, ಈ ಘಟನೆಯು ಪ್ರೀತಿ ಮತ್ತು ಸಾಂತ್ವನದ ವಿಷಯವಾಗಿದೆ, ಯಾವುದೇ ಸಮುದಾಯವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.



