Flash News

ಅಮಿತ್ ಶಾ ಅಸಮರ್ಥ ಗೃಹ ಸಚಿವ: ಪ್ರಿಯಾಂಕ್ ಖರ್ಗೆ ಕಿಡಿ!

ಬೆಂಗಳೂರು: ನಿನ್ನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿ ಸ್ಫೋಟದ ಘಟನೆಯ ನಂತರ ರಾಜಕೀಯದ ಕಾವು ಹೆಚ್ಚಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಅಸಮರ್ಥ ಗೃಹ ಸಚಿವರೂ ಯಾರಾದರೂ ಇದ್ದರೆ, ಅದು ಅಮಿತ್ ಶಾ. ದೆಹಲಿ, ಮಣಿಪುರ್, ಪೆಹಲ್ಗಾಮ್ ಎಲ್ಲ ಕಡೆ ಭದ್ರತಾ ವೈಫಲ್ಯ, ಆದರೆ ಉತ್ತರ ಯಾರಿಂದಲೂ ಸಿಗುತ್ತಿಲ್ಲ. ಇವರ ಭದ್ರತಾ ವೈಪಲ್ಯದಿಂದ ಇನ್ನು ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದವರು ಒಳನುಸುಳಿ ಬರುತ್ತಿದ್ದಾರೆ ಎಂದು ಪ್ರತಿ ಸಭೆಯಲ್ಲೂ ಭಾಷಣ ಮಾಡುತ್ತಾರೆ. ಹಾಗಿದ್ರೆ ಈ ಎಲ್ಲದಕ್ಕೂ ಹೊಣೆಗಾರಿಕೆ ಯಾರದ್ದು? ನಾವು ವಿರೋಧ ಪಕ್ಷವಾ ಅಥವಾ ಅವರು ಸರ್ಕಾರವಾ? ಮಾತೆತ್ತಿದರೆ ಅಭಿನವ ಸರ್ದಾರ್ ಪಟೇಲ್ ಅಂತ ಕರೆಸಿಕೊಳ್ಳುತ್ತಾರೆ, ಅಥವಾ 56 ಇಂಚಿನ ಎದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಭದ್ರತೆ ಎಲ್ಲಿದೆ? ಎಂದು ವ್ಯಂಗ್ಯವಾಡಿದ್ದಾರೆ.

ಪ್ರಿಯಾಂಕ್ ಖರ್ಗೆಯ ಈ ಹೇಳಿಕೆಗಳು ಬಿಜೆಪಿ ವಿರುದ್ಧದ ನೇರ ದಾಳಿ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇಂತಹ ಘಟನೆ ಬೇರೆ ದೇಶದಲ್ಲಿ ಆಗಿದ್ದರೆ, ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡುತ್ತಿದ್ದರು, ಆದರೆ ನಮ್ಮಲ್ಲಿ ಏಕೆ ಈ ಸ್ಥತಿ ಇಲ್ಲಎಂದರೆ, ಮೋದಿ ಅವರಿಗೆ ಅಮಿತ್ ಶಾ ಕಂಡರೆ ಭಯ? ಎಲ್ಲಿ ಗುಜರಾತ್‌ನ ಭ್ರಷ್ಟಾಚಾರಗಳ ಪ್ರಕರಣಗಳು ಬೀರುತ್ತವೆ ಎಂದು ಅವರಿಗೆ ಭಯ ಪಡುತ್ತಾರೆ ಎಂದು ಆರೋಪಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ದೇಶದ ಭದ್ರತಾ ವ್ಯವಸ್ಥೆಯು ಸಂಪೂರ್ಣ ರಾಜಕೀಯ ಪ್ರಚಾರದ ಭರದಿಂದ ಕುಗ್ಗಿ ನಲುಗಿಹೋಗಿದೆ. ಇವರು ಮೊದಲು ತಮ್ಮ ಕಾರ್ಯಪದ್ಧತಿಯ ಲೆಕ್ಕ ಕೊಡಲಿ, ನಂತರ ದೇಶಪ್ರೇಮದ ಪಾಠ ಹೇಳಲಿ. ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಅಕೌಂಟೆಬಿಲಿಟಿ ಇರಬೇಕಾ? ಕೇಂದ್ರ ಸರ್ಕಾರಕ್ಕೆ ಇಲ್ಲವಾ? ಎಂದು ಗಂಭೀರವಾಗಿ ಪ್ರಶ್ನಿಸಿದ್ದಾರೆ.