ಯಾದಗಿರಿ : ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಶನಿವಾರ ರಾತ್ರಿ ನಡೆದ ಬಹಿರಂಗ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ದೇಶದಲ್ಲಿ ಇರಬೇಕಾದರೆ ಒಂದೇ ಮಾತು ಮಾತನಾಡಬೇಕು ಎಂಬ ಮನಸ್ಥಿತಿ ಇದೆ. ನಾನು ಮಹಾತ್ಮ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ. ನಮ್ಮ ದೇಶದ ಇತಿಹಾಸವೇ ಬೇರೆ ರೀತಿಯಲ್ಲಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ ಯತ್ನಾಳ್, ಮನೆ ಮೇಲೆ ಕಲ್ಲು ಹೊಡೆದರೆ ಬೂಲ್ಡೋಝರ್ ಬರುತ್ತದೆ. ಸೈನಿಕರಿಗೆ ಗೌರವ ನೀಡುವ ಕಾರ್ಯವನ್ನು ಬಿಜೆಪಿ ಮಾಡಿದೆ. ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಮಾತನಾಡಿದ ಅವರು, ಅಂಬೇಡ್ಕರ್ ದಲಿತರ ನಾಯಕರಷ್ಟೇ ಅಲ್ಲ, ಇಡೀ ಭಾರತದ ನಾಯಕರು. ಅವರನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಕುರಿತು ಟೀಕಿಸಿದ ಯತ್ನಾಳ್, ನೆಹರೂ ಅಯೋಗ್ಯ ಪ್ರಧಾನಿ. ಈ ದೇಶದ ದುರ್ದೈವ ಎಂದರೆ ಪಟೇಲ್, ಅಂಬೇಡ್ಕರ್ ಅಥವಾ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರಧಾನಿ ಆಗಲಿಲ್ಲ ಎಂದು ಹೇಳಿದರು.



