Flash News

ಬೆಳ್ತಂಗಡಿ | ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತಿಯ ಅಪಹರಣ ಯತ್ನ, ಓಮ್ನಿ ಕಾರಿನಲ್ಲಿ ಅಡ್ಡಗಟ್ಟಿ ಕಿಡ್ನಾಪ್ ಕೃತ್ಯ ವಿಫಲ

ಬೆಳ್ತಂಗಡಿ: ಶಾಲಾ ಬಾಲಕಿಯೊಬ್ಬಳನ್ನು ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತ ತಂಡವೊಂದು ಅಪಹರಿಸಲು ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದುಷ್ಕರ್ಮಿಗಳ ಕೃತ್ಯವನ್ನು ಪ್ರತಿರೋಧಿಸಿದ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇಲ್ಲಿನ 16 ವರ್ಷದ ಬಾಲಕಿಯು ಇಂದು ಬೆಳಿಗ್ಗೆ ಸುಮಾರು 8:30ರ ವೇಳೆಗೆ ಸ್ಕೂಟಿಯಲ್ಲಿ ಶಾಲೆಗೆ ತೆರಳುತ್ತಿದ್ದಳು. ಮನೆಯಿಂದ ಸುಮಾರು 300 ಮೀಟರ್ ಕ್ರಮಿಸುತ್ತಿದ್ದಂತೆ, ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಅಪರಿಚಿತರು ಆಕೆಯನ್ನು ಅಡ್ಡಗಟ್ಟಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ದುಷ್ಕರ್ಮಿಗಳು ಬಾಲಕಿಯನ್ನು ಬಲವಂತವಾಗಿ ಅಪಹರಿಸಲು ಪ್ರಯತ್ನಿಸಿದ್ದಾರೆ.

ಅಪಹರಣಕಾರರ ಕೈಗೆ ಸಿಲುಕದೆ ಬಾಲಕಿಯು ತೀವ್ರ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಚಾಕುವಿನಿಂದ ಬಾಲಕಿಯ ಎಡಗೈಗೆ ನಾಲ್ಕು ಬಾರಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗಳು ಮೇಲ್ಮೈಯಾಗಿದ್ದು, ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗಾಯಗಳಿಗೆ ಹೊಲಿಗೆ ಹಾಕುವ ಅವಶ್ಯಕತೆ ಕಂಡುಬಂದಿಲ್ಲ.

ಘಟನೆಯ ಕುರಿತು ಬಾಲಕಿಯು ಪೋಷಕರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.