Flash News

ಚಿಕ್ಕಮಗಳೂರಿನಲ್ಲಿ ಕೋಮು ಘರ್ಷಣೆ; ಇಡೀ ನಗರ ಬೂದಿ ಮುಚ್ಚಿದ ಕೆಂಡ: ರಾತ್ರೋರಾತ್ರಿ ನಡೆದಿದ್ದೇನು?

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೋಮು ಘರ್ಷಣೆ ಉಂಟಾಗಿದೆ. ಈ ಘಟನೆಯಿಂದಾಗಿ ಎರಡೂ ಕೋಮಿನ ಯುವಕರು ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ವಿಜಯಪುರ ಬಡಾವಣೆಯಲ್ಲಿನ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಐದರಿಂದ ಆರು ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಹೆಣ್ಣು ಮಕ್ಕಳ ಹಿಂದೆ ಹೋಗೋದು, ಕಲ್ಲು ಹೊಡೆಯೋದು ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ಇಬ್ಬರನ್ನು ಹಿಡಿದ ಹಿಂದೂ ಸಂಘಟನೆಯವರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ಹಲ್ಲೆ ವಿಷಯ ತಿಳಿಯುತ್ತಿದ್ದಂತೆ ಬಸವನಹಳ್ಳಿ ಪೊಲೀಸ್ ಠಾಣೆ ಮುಂದೆ ಎರಡೂ ಕೋಮಿನ ನೂರಾರು ಯುವಕರ ಜಮಾವಣೆಗೊಂಡಿದ್ದರು. ಹಲ್ಲೆಗೊಳಗಾದವರು ಕಲ್ಲು ಹೊಡೆದಿಲ್ಲ. ಹಲ್ಲೆ ನಡೆಸಿದವರ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು ಎಂದು ಒಂದು ಕೋಮಿನ ಯುವಕರು ಆಗ್ರಹಿಸಿದ್ದಾರೆ. ಇತ್ತ ಆಸ್ಪತ್ರೆ ಮುಂದೆಯೂ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.

ಹಲ್ಲೆಗೊಳಗಾದ ಯುವಕರಿಗೆ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಎರಡೂ ಕೋಮಿನ ಯುವಕರನ್ನ ಕಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಪೊಲೀಸರ ಭರವಸೆ ನೀಡುತ್ತಿದ್ದಂತೆ ಜನರು ಹಿಂದಿರುಗಿದ್ದಾರೆ.

ಇನ್ನು ಕೆಲ ಯವಕರು ರಾತ್ರಿ ಓಡಾಟ ನಡೆಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವಿಜಯಪುರ ಬಡಾವಣೆಯ ಸುಧಾ ಎಂಬವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇನ್ನು ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಸ್‌ಡಿಪಿಐ ಮುಖಂಡ ಮುನೀರ್, ಹಲ್ಲೆಗೈದ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.