ನವದೆಹಲಿ: ಮಗನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ನ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ, ಪತ್ನಿ ರಾಜಿಯಾ ಸುಲ್ತಾನಾ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರ ಮಗ ಅಖಿಲ್ ಅಖ್ತರ್(35) ಅಕ್ಟೋಬರ್ 16ರಂದು ಹರಿಯಾಣದ ಪಂಚಕುಲದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.
ಶುಕ್ರವಾರ ದಾಖಲಾಗಿರುವ ಎಫ್ಐಆರ್ ಪ್ರಕಾರ, ಮೃತ ವ್ಯಕ್ತಿ ಮತ್ತು ಅವರ ಕುಟುಂಬದ ನಡುವೆ ಅಸಮಾಧಾನವಿತ್ತು.
‘ಈ ಸಂಬಂಧ ಕೇಂದ್ರ ತನಿಖಾ ದಳವು(ಸಿಬಿಐ) ನವೆಂಬರ್ 6ರಂದು ಎಫ್ಐಆರ್ ದಾಖಲಿಸಿದೆ.ಪಂಚಕುಲದ ಮಾನಸಾ ದೇವಿ ಮಂದಿರ ಬಳಿಯ ಸೆಕ್ಟರ್ 4ರಲ್ಲಿ ವಾಸಿಸುತ್ತಿರುವ ಪಂಜಾಬ್ನ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಮತ್ತು ಪಂಜಾಬ್ನ ಮಾಜಿ ಲೋಕೋಪಯೋಗಿ ಪಿಡಬ್ಲ್ಯೂಡಿ ಸಚಿವೆ ರಜಿಯಾ ಸುಲ್ತಾನಾ ಅವರ ಪುತ್ರ ಅಖಿಲ್ ಅಖ್ತರ್ ಅಕ್ಟೋಬರ್ 16ರಂದು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿರುವ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ’ಎಂದು ಸಿಬಿಐ ವಕ್ತಾರರು ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಸ್ತಫಾ, ಸುಲ್ತಾನಾ ಜೊತೆಗೆ ಅಖ್ತರ್ ಅವರ ಪತ್ನಿ ಮತ್ತು ಸಹೋದರಿಯ ವಿರುದ್ಧವೂ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಬಿಎನ್ಎಸ್ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ ಎಂದು ಹೇಳಿಕೆ ತಿಳಿಸಿದೆ.
ಆಗಸ್ಟ್ 27ರಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದ ಅಖ್ತರ್, ತನ್ನ ಪತ್ನಿ ಮತ್ತು ತಂದೆಯ ನಡುವೆ ಅಕ್ರಮ ಸಂಬಂಧ ಕಂಡುಬಂದಿದೆ ಎಂದು ಆರೋಪಿಸಿ, ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ತನ್ನ ಇಡೀ ಕುಟುಂಬವು ಆತನನ್ನು ಕೊಲ್ಲಲು ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಿದೆ ಎಂದು ಉಲ್ಲೇಖಿಸಿದ್ದ ಎಂಬುದಾಗಿ ಸಂಸ್ಥೆ ತಿಳಿಸಿದೆ.
ಮೊದಲಿಗೆ ಪ್ರಕರಣ ದಾಖಲಿಸಿಕೊಂಡಿದ್ದ ಪಂಚಕುಲ ಪೊಲೀಸರು, ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದರು.



