Flash News

ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ; ಬೆಳ್ಳಂ ಬೆಳಗ್ಗೆಯೇ ಡಿಕೆಶಿ ಪೋಸ್ಟ್​, ಏನಿದರ ಮರ್ಮ?

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಧಿಕಾರ ಹಂಚಿಕೆ ವಿಚಾರ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಸಿಎಂ ಸಿದ್ದರಾಮಯ್ಯ ಕುರ್ಚಿ ಕಾದಾಟ ಹೈಕಮಾಂಡ್​ಗೆ ದೊಡ್ಡ ತಲೆಬಿಸಿಯಾಗಿದೆ. ದೆಹಲಿ ಅಂಗಳದಲ್ಲಿ ಕರ್ನಾಟಕ ಪಾಲಿಟಿಕ್ಸ್​ ಚರ್ಚೆ ಜೋರಾಗಿದೆ. ಇದರ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್​ ಬೆಳ್ಳಂ ಬೆಳಗ್ಗೆಯೇ ಟ್ವೀಟ್ ಬಾಂಬ್ ಸಿಡಿಸಿದ್ದಾರೆ.

ಪವರ್​ ಶೇರಿಂಗ್ ವಿಚಾರದ ಬಗ್ಗೆ ಹೈಕಮಾಂಡ್​ನಲ್ಲಿ ಭಾರೀ ಚರ್ಚೆ ಆಗ್ತಿರುವಾಗಲೇ ಇಂದು (ನವೆಂಬರ್​ 27) ಬೆಳ್ಳಂ ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಡಿಕೆ ಟ್ವೀಟ್​ ಇದೀಗ ಕುತೂಹಲ ಮೂಡಿಸಿದ್ದು, ಪೋಸ್ಟ್ ಹಿಂದಿನ ಒಳ ಮರ್ಮವೇನು ಎನ್ನುವ ಚರ್ಚೆ ಹುಟ್ಟುಹಾಕಿದೆ.

‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಟ್ವೀಟ್ ಮಾಡಿದ್ದಾರೆ. ಯಾರಿಗೆ ಕೊಟ್ಟ ಮಾತು ನೆನಪಿಸುತ್ತಿದ್ದಾರೆ ಡಿಸಿಎಂ ಎನ್ನುವ ಪ್ರಶ್ನೆ ಮೂಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಡಿಕೆಶಿ ಕೂಡ ಭಾಗಿಯಾಗಲಿದ್ದಾರೆ. ಈ ಹೊತ್ತಲ್ಲೇ ಡಿಕೆಶಿ ಕೊಟ್ಟ ಮಾತಿನ ಕುರಿತು ಪೋಸ್ಟ್ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ವಿಶ್ವದ ಅತಿದೊಡ್ಡ ಶಕ್ತಿ ಎಂದರೆ ಮಾತನ್ನು ಉಳಿಸಿಕೊಳ್ಳುವುದು. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಹೇಳಿದಂತೆ ನಡೆಯಬೇಕು. ಕೊಟ್ಟ ಮಾತೇ ವಿಶ್ವ ಶಕ್ತಿ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಟ್ವೀಟ್​ ಮಾಡಿದ್ದಾರೆ.