ಮಂಗಳೂರು: ಸಾಮಾಜಿಕ ಜಾಲತಾಣ ಇನ್ ಸ್ಟಾ ಗ್ರಾಮ್ ನಲ್ಲಿ ಟೀಮ್ ಎಸ್ಡಿಪಿಐ ಹೆಸರಲ್ಲಿ ಅನ್ಯಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು ಈ ಪೋಸ್ಟ್ ಹಾಕಿದ್ದ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಆರೋಪಿಯನ್ನು ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗಲೇ ಅರೆಸ್ಟ್ ಮಾಡಲಾಗಿದೆ.
ಕಳೆದ ಅಕ್ಟೋಬರ್ 11ರಂದು ಟೀಮ್ ಎಸ್ಡಿಪಿಐ ಹೆಸರಲ್ಲಿ ಉಳಾಯಿಬೆಟ್ಟು ನಿವಾಸಿ ಅಬ್ದುಲ್ ಖಾದರ್ ಈ ಪೋಸ್ಟ್ ಹಾಕಿದ್ದ. ಪ್ರಕರಣದಲ್ಲಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದಾಗ ಪ್ರಚೋದನಕಾರಿ ಪೋಸ್ಟ್ ಹಾಕಿದ ವ್ಯಕ್ತಿ ಮಂಗಳೂರಿನ ಉಳಾಯಿಬೆಟ್ಟು ನಿವಾಸಿ, ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಅಬ್ದುಲ್ ಖಾದರ್ ನೇಹಾದ್ (27) ಎಂದು ಗುರುತಿಸಲಾಗಿತ್ತು. ಪ್ರಸ್ತುತ ಬಂಟ್ವಾಳದ ಸಜಿಪಮುನ್ನೂರು ಗ್ರಾಮದಲ್ಲಿ ನೆಲೆಸಿರುವುದು ತಿಳಿದುಬಂದಿತ್ತು.
ಸದ್ರಿ ಆರೋಪಿಯ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು. ಆರೋಪಿ ಅಬ್ದುಲ್ ಖಾದರ್ ಡಿ.14ರಂದು ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದಿದ್ದು ಈ ವೇಳೆ ಲುಕೌಟ್ ನೋಟಿಸ್ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಮಂಗಳೂರಿನಲ್ಲಿ ಕೋಮು ದ್ವೇಷ ಹಬ್ಬಿಸುವ ಉದ್ದೇಶದಿಂದ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಲಾಗುತ್ತಿತ್ತು. ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿ ಬಂದ ಬಳಿಕ ಈ ರೀತಿಯ ಜಾಲತಾಣದ ಪೋಸ್ಟ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ವಿದೇಶದಲ್ಲಿ ಕುಳಿತು ಇಂತಹ ಪೋಸ್ಟ್ ಹಾಕುತ್ತಿದ್ದವರ ವಿರುದ್ಧ ಕೇಸು ದಾಖಲಿಸಿ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರು.



