ಹರಿಯಾಣ, ಡಿಸೆಂಬರ್ 05: ಹರಿಯಾಣದಲ್ಲಿ ನಡೆದ ಮಕ್ಕಳ ಸರಣಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯೊಬ್ಬಳು ತನಗಿಂತ ಅಂದವಾಗಿರುವ ಮಕ್ಕಳನ್ನು ಹತ್ಯೆ ಮಾಡಿದ್ದಳು. ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮಕ್ಕಳ ಕುಟುಂಬದವರ ಹೇಳಿಕೆ ಬೆಚ್ಚಿಬೀಳಿಸಿದೆ. ವಿಚಾರಣೆಯ ಸಮಯದಲ್ಲಿ ಮಹಿಳೆ ಹಲವಾರು ವರ್ಷಗಳಿಂದ ತನ್ನ ಕುಟುಂಬ ಮತ್ತು ಸಂಬಂಧಿಕರ ಸುಂದರ ಹುಡುಗಿಯರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಅಲ್ಲದೇ, ಇಲ್ಲಿಯವರೆಗೆ ತನ್ನ ಸ್ವಂತ ಮಗ ಸೇರಿದಂತೆ ನಾಲ್ವರು ಮಕ್ಕಳನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಟ್ವಿಸ್ಟ್ ಏನೆಂದರೆ ಕುಟುಂಬದವರು ಹೇಳುವ ಪ್ರಕಾರ ಆಕೆ ಮೂವರನ್ನು ಏಕಾದಶಿಯಂತೇ ಹತ್ಯೆ ಮಾಡಿದ್ದಾಳೆ, ಆಕೆ ವಾಮಾಚಾರವೇನಾದರೂ ಮಾಡುತ್ತಿದ್ದಳೇ ಎನ್ನುವ ಅನುಮಾನ ಮೂಡಿದೆ. ಆಗಸ್ಟ್ನಲ್ಲಿ ಸೇವಾ ಗ್ರಾಮದಲ್ಲಿ ಪೂನಂ ಅವರ ಆರು ವರ್ಷದ ಜಿಯಾಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು ಎಂದು ಸುರೇಂದ್ರ ಹೇಳಿದ್ದಾರೆ. ಅಂದೇ ಆಕೆಯ ಮೇಲೆ ಅನುಮಾನ ಬಂದಿತ್ತು ಸಾಮಾಜಿಕ ಒತ್ತಡದಿಂದಾಗಿ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಹೇಳಿದ್ದಾರೆ.
ಏಕಾದಶಿಯಂದು ಮೂರು ಕೊಲೆಗಳು ನಡೆದಿವೆ ಮತ್ತು ಎಲ್ಲವೂ ಒಂದೇ ರೀತಿಯಲ್ಲಿ ನಡೆದಿವೆ. ಇದು ಕೆಲವು ರೀತಿಯ ಹಿಂಸಾತ್ಮಕ ಚಟುವಟಿಕೆಯನ್ನು ಸೂಚಿಸುತ್ತದೆ ಎಂದು ಅವರು ಆರೋಪಿಸಿದರು. ಏನಾದರೂ ಪ್ರಶ್ನೆ ಮಾಡಿದರೆ ಪೂನಂ ನಾಟಕೀಯವಾಗಿ ಅಳುತ್ತಾಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾಳೆ. ಜೈಲು ಶಿಕ್ಷೆ ಕೊಟ್ಟರೆ ಆಕೆ ಪೆರೋಲ್ ಮೇಲೆ ಮತ್ತೆ ಹೊರಬಂದು ಮತ್ತೆ ಕೊಲ್ಲುವ ಸಾಧ್ಯತೆಗಳಿರುತ್ತದೆ.
ಡಿಸೆಂಬರ್ 1ರ ಸಂಜೆ ನೌಲತಾ ಗ್ರಾಮದಲ್ಲಿ 6 ವರ್ಷದ ಬಾಲಕಿ ವಿಧಿ ತನ್ನ ಕೋಣೆಯೊಳಗೆ ನೀರಿನ ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿತ್ತು. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹುಡುಗಿಯ ಶವ ಪತ್ತೆಯಾದ ಕೋಣೆ ಹೊರಗಿನಿಂದ ಲಾಕ್ ಆಗಿರುವುದು ಕಂಡುಬಂದಿತ್ತು. ಹೀಗಾಗಿ, ಪ್ರಕರಣ ಅನುಮಾನಾಸ್ಪದವಾಗಿತ್ತು.
ಡಿಸೆಂಬರ್ 2 ರಂದು ಅಪರಾಧ ತಂಡ ಮತ್ತು ಡಿಎಸ್ಪಿ ನವೀನ್ ನೇತೃತ್ವದಲ್ಲಿ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆಯಲ್ಲಿ ಬಾಲಕಿ ವಿಧಿ ಪಾಲ್ ಸಿಂಗ್ ಅವರ ಮನೆಯಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಮದುವೆ ಮೆರವಣಿಗೆ ಹೋದ ನಂತರ ಆಕೆ ಇದ್ದಕ್ಕಿದ್ದಂತೆ ಕಾಣೆಯಾಗಿ, ನಂತರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು ಎಂದು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಕೊಲೆ ಆರೋಪಿ ಮಹಿಳೆ ತಾನು ಸುಂದರ ಹುಡುಗಿಯರನ್ನು ದ್ವೇಷಿಸುತ್ತೇನೆ ಮತ್ತು ಅವಕಾಶ ಸಿಕ್ಕಾಗಲೆಲ್ಲ ಅವರನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತೇನೆ ಎಂದು ಹೇಳಿದ್ದಾಳೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಅವಳು 2023ರಲ್ಲಿ ಸೋನಿಪತ್ನ ಭವಾರ್ ಗ್ರಾಮದಲ್ಲಿ ತನ್ನ ಸ್ವಂತ ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು. ಅದೇ ರೀತಿ ಅವಳು ಇನ್ನೂ ಇಬ್ಬರು ಮಕ್ಕಳನ್ನು ಕೊಂದಿದ್ದಳು. ಈ ಪ್ರಕರಣ ಕುರಿತಂತೆ ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ
ಇದುವರೆಗಿನ ತನಿಖೆಯಲ್ಲಿ ನಾಲ್ವರು ಮಕ್ಕಳ ಕೊಲೆ ದೃಢಪಟ್ಟಿದೆ. ನೌಲ್ತಾ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇತರ ಜಿಲ್ಲೆಗಳಲ್ಲಿ ನಡೆದ ಹಿಂದಿನ ಘಟನೆಗಳ ಸಂಪೂರ್ಣ ದಾಖಲೆಯನ್ನು ಸಂಬಂಧಿತ ಪೊಲೀಸ್ ತಂಡಗಳಿಗೆ ಕಳುಹಿಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆಕೆ ವರ್ತನೆ ಹೇಗಿರುತ್ತಿತ್ತು?
ಪ್ರತಿ ಹತ್ಯೆಯ ನಂತರವೂ ಪೂನಂ ಶಾಂತಿಯಿಂದಲೇ ಇರುತ್ತಿದ್ದಳು, ಮತ್ತೆ ಕಾರ್ಯಕ್ರಮಗಳಿಗೆ ಹಿಂದಿರುಗುತ್ತಿದ್ದಳು, ಒದ್ದೆಯಾದ ಬಟ್ಟೆಗಳಿಗೆ ಏನೇನೋ ವಿವರಗಳನ್ನು ನೀಡುತ್ತಿದ್ದಳು ಮತ್ತು ಏನೂ ನಡೆದೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಳು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಕೊಲೆಗಳ ನಂತರ ಆಕೆಯ ಯಾವುದೇ ಪಶ್ಚಾತ್ತಾಪ ಇರಲಿಲ್ಲ.
ಆಕೆಯ ತಾಯಿ ಸುನೀತಾ ದೇವಿ ಕೂಡ ಮೌನ ಮುರಿದು, ಮದುವೆಯ ನಂತರವೇ ಈ ನಡವಳಿಕೆ ಪ್ರಾರಂಭವಾಯಿತು ಎಂದು ಹೇಳಿದರು. “ಮದುವೆಗೆ ಮೊದಲು ಅವಳು ಯಾವುದೇ ಮಗುವಿಗೆ ಹಾನಿ ಮಾಡಿರಲಿಲ್ಲ. ಅವಳಿಗೆ ಅನಾರೋಗ್ಯವಿದ್ದರೆ, ನಾವು ಅದಕ್ಕೆ ಚಿಕಿತ್ಸೆ ನೀಡುತ್ತಿದ್ದೆವು. ಏನೇ ನಡೆದರೂ ಅದು ಮದುವೆಯ ನಂತರವೇ ಆಗಿದೆ ಎಂದು ಅವರು ಹೇಳಿದರು.



