Flash News

ವಿಟ್ಲ | ಐಟಿಐಯಲ್ಲಿ ಚೂರಿ ಇರಿತ; ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದಲ್ಲಿ ಇಬ್ಬರು ಐಟಿಐ ವಿದ್ಯಾರ್ಥಿಗಳು ಚೂರಿ ಇರಿತಕ್ಕೊಳಗಾಗಿ ಗಾಯಗೊಂಡ ಘಟನೆ ಪಟ್ಟಣದ ಐಟಿಐಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಪುತ್ತೂರು ಬನ್ನೂರು ನಿವಾಸಿ ಮಹಮ್ಮದ್ ರಿಯಾನ್ (18) ಮತ್ತು ಮಂಜೇಶ್ವರ ದೈಗೋಳಿ ನಿವಾಸಿ ಯಜ್ಞೇಶ್ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಥಮ ವರ್ಷದ ಎಲೆಕ್ಟ್ರಿಷಿಯನ್ ಕೋರ್ಸ್ ಕಲಿಯುತ್ತಿರುವ ರಿಯಾನ್ ಹಾಗೂ ವಿಟ್ಲ ನಿವಾಸಿ ಹೇಮಂತ್ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ. ಬಳಿಕ ಹೇಮಂತ್ ಚೂರಿ ತಂದು ರಿಯಾನ್‌ಗೆ ಇರಿದಿದ್ದಾನೆ ಎನ್ನಲಾಗಿದೆ. ಈ ವೇಳೆ ತಡೆಯಲು ಮುಂದಾದ ಯಜ್ಞೇಶ್‌ಗೂ ಗಾಯವಾಗಿದೆ.

ಮಾಹಿತಿ ತಿಳಿದ ತಕ್ಷಣ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಹೇಮಂತ್ ನನ್ನು ವಶಕ್ಕೆ ಪಡೆದಿದ್ದಾರೆ.