Flash News

ವಿವಿಧ ಇಲಾಖೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಕೆಜೆ.ಜಾರ್ಜ್ ಬಳಿಕ ಶಾಸಕ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ..!

ಮೈಸೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಕೆ.ಜೆ. ಜಾರ್ಜ್ ನಂತರ ಕಾಂಗ್ರೆಸ್​​ನ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ.

ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದ ಘಟನೆ ನಡೆದಿದೆ.

ಈ ವೇಳೆ ಸಚಿವ ಪರಮೇಶ್ವರ್​​ ತನ್ವೀರ್​ಸೇಠ್​ ಮನವೊಲಿಕೆ ಯತ್ನ ಮಾಡಿದ್ದು, ಜೊತೆಗೆ ಶಾಸಕ‌ ಅನಿಲ್​​ ಕೂಡ ಅವರನ್ನು ಸಮಾಧಾನ ಮಾಡಿದ್ದಾರೆ.

ವೇದಿಕೆ ಮೇಲೆ ಬಂದರೆ ಬೇರೆ ಮಾತನಾಡುತ್ತೇನೆ ಎಂದಿದ್ದ ತನ್ವೀರ್ ಸೇಠ್, ಕೊನೆಗೆ ಒಲ್ಲದ ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ತನ್ವೀರ್ ಸೇಠ್, ಹಲವು ಅಧಿಕಾರಿಗಳು ಶಂಖದಿಂದ ಬಂದರೆ ಮಾತ್ರ ತೀರ್ಥ ಎಂದುಕೊಂಡಿದ್ದಾರೆ. ನಾವು ಕೂಡ ಶಂಖ ಊದುವ ಕೆಲಸ ಮಾಡಲಿದ್ದೇವೆ. ಸೂಕ್ತ ಸನ್ನಿವೇಶ ಬಂದಾಗ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.