ಹೈದರಾಬಾದ್: ಕರ್ನೂಲ್ನ ಹೆದ್ದಾರಿಯಲ್ಲಿ ನಡೆದ ಭೀಕರ ಬಸ್ ಅಗ್ನಿ ಅವಘಡದಲ್ಲಿ ಅನೇಕ ಕುಟುಂಬಗಳನ್ನು ದುಃಖದ ಮಡುವಿನಲ್ಲಿ ಬೀಳುವಂತೆ ಮಾಡಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಮೆಮುರಿ ಕಾವೇರಿ ಟ್ರಾವೆಲ್ಸ್, ಬೈಕಿಗೆ ಡಿಕ್ಕಿ ಹೊಡೆದು ಪರಿಣಾಮ ಅಗ್ನಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಈ ದುರ್ಘಟನೆಯಲ್ಲಿ ಹಲವು ಮಂದಿ ಜೀವಂತವಾಗಿ ದಹನಗೊಂಡಿದ್ದಾರೆ. ಈ ಬಸ್ ಕುರಿತು ಪರಿಶೀಲನೆ ನಡೆಸಿದಾಗ ಈ ಬಸ್ ವಿರುದ್ಧ ತೆಲಂಗಾಣದಲ್ಲಿ 16 ಚಲನ್ಗಳನ್ನು ನೀಡಲಾಗಿದ್ದು, 23,120 ರೂ ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ.
22 ತಿಂಗಳಲ್ಲಿ 16 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್: ಬಸ್ 2024ರ ಜನವರಿ 27 ರಿಂದ 2025ರ ಅಕ್ಟೋಬರ್ 9ರವರೆಗೆ 16 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದು, ಸಾವಿರಾರು ದಂಡದ ಮೊತ್ತವನ್ನು ಉಳಿಸಿಕೊಂಡಿದೆ. 9 ಬಾರಿ ನೋ ಎಂಟ್ರಿ ವಲಯದಲ್ಲಿ ಪ್ರವೇಶ ಮಾಡಿದ್ದಕ್ಕೆ ದಂಡ ವಿಧಿಸಲಾಗಿದ್ದು, ವೇಗದ ಚಾಲನೆ ಮತ್ತು ಅಪಾಯಕಾರಿ ಚಾಲನೆ ಉಲ್ಲಂಘನೆಯನ್ನು ಈ ಬಸ್ ಹೊಂದಿರುವುದು ತಿಳಿದು ಬಂದಿದೆ.
ಬಸ್ ಸುಸ್ಥಿತಿಯಲ್ಲಿದೆ ಎಂದ ಸಾರಿಗೆ ಇಲಾಖೆ: ಅಗ್ನಿ ಅವಘಡಕ್ಕೆ ಒಳಗಾಗಿರುವ ಒಳಗೊಂಡಿರುವ ಬಸ್ DD01 N9490 ನೋಂದಣಿ ಹೊಂದಿದೆ ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆ ತಿಳಿಸಿದೆ. ಬಸ್ ಸುಸ್ಥಿತಿಯಲ್ಲಿತ್ತು. ಬೈಕಿಗೆ ಬಲವಾದ ಡಿಕ್ಕಿ ಹೊಡೆದ ಕಾರಣ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಕಾವೇರಿ ಟ್ರಾವೆಲ್ಸ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಬಸ್ ದಿಯು ಅಂಡ್ ದಮನ್ ನಲ್ಲಿ 2018ರ ಮೇ 2ರಂದು ನೋಂದಣಿಯಾಗಿದೆ. 2030ರ ಏಪ್ರಿಲ್ 30ರವರೆಗೆ ಪ್ರವಾಸಿ ಪರ್ಮಿಟ್ ಕೂಡ ಹೊಂದಿದೆ. ಬೆಂಕಿಗಾಹುತಿಯಾಗಿರುವ ಬಸ್ನ ಫಿಟ್ನೆಸ್ ಸರ್ಟಿಫಿಕೇಟ್ 2027ರ ಮಾರ್ಚ್ 31ರವರೆಗೆ ಇದೆ. 2026ರ ಏಪ್ರಿಲ್ 20ರವರೆಗೆ ಬಸ್ ಇನ್ಸುರೆನ್ಸ್ ಇದೆ. ಬಸ್ಗೆ ಬೆಂಕಿ ಹೊತ್ತಿರುವ ಕುರಿತು ಎಲ್ಲಾ ಆಯಾಮದಲ್ಲಿ ತನಿಖೆ ಸಾಗಿದೆ. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ನಾವು ಕ್ರಮಗಳನ್ನು ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಇಂದು ಮುಂಜಾನೆ ಕರ್ನೂಲ್ ಉಪನಗರ ಚಿನ್ನೇಟಕೂರಿನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಘಟನೆ ನಡೆದಿದೆ. ಬಸ್ ಬೈಕ್ಗೆ ಬಲವಾಗಿ ಡಿಕ್ಕಿ ಹೊಡೆದ ನಂತರ ಬಸ್ ಹೊತ್ತಿ ಉರಿದಿದೆ. ಅಗ್ನಿಯ ಕೆನ್ನಾಲಿಗೆಗೆ ಬಸ್ ನಲ್ಲಿದ್ದ ಅನೇಕರು ಜೀವಂತವಾಗಿ ಸುಟ್ಟು ಕರಕಲಾಗಿದ್ದು, 12 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಜೀವ ಉಳಿಸಿಕೊಂಡಿದ್ದಾರೆ.



