Flash News

ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ: ಹೈಕೋರ್ಟ್‌ ತೀರ್ಪು

ಬೆಂಗಳೂರು: ಡೇಟಿಂಗ್‌ ಆ್ಯಪ್‌ನಲ್ಲಿ ಭೇಟಿ ಮಾಡಿದ ನಂತರ ಓಯೋ ರೂಮ್‌ಗೆ ಕರೆದೊಯ್ದು ತನ್ನ ಸಮ್ಮತಿ ಇಲ್ಲದಿದ್ದರೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು 23 ವರ್ಷದ ಯುವಕನ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ತಮ್ಮ ವಿರುದ್ಧ ಬಿಎನ್‌ಎಸ್‌ ಕಾಯಿದೆ ಸೆಕ್ಷನ್‌ 64ರಡಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ರದ್ದು ಕೋರಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಸಾಂಪ್ರಸ್‌ ಆಂಥೋನಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ‘ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಹಾಗೂ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ‘ ಎಂದು ತೀರ್ಪು ನೀಡಿದೆ.

ದೂರು, ಪೊಲೀಸರು ಸಲ್ಲಿಸಿದ ಆರೋಪಪಟ್ಟಿ, ದೂರುದಾರರು ಮತ್ತು ಆರೋಪಿಗಳ ನಡುವಿನ ಸಂಭಾಷಣೆಗಳ ವಿವರಗಳನ್ನು ಒದಗಿಸಿ ಸಲ್ಲಿಸಿರುವ ಮೆಮೊಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ”ಇಬ್ಬರ ನಡುವೆ ನಡೆದ ಚಾಟ್‌ಗಳು ಉತ್ತಮ ಅಭಿರುಚಿಯಲ್ಲಿಲ್ಲ ಮತ್ತು ಆದೇಶದಲ್ಲಿ ಅವುಗಳನ್ನು ಉಲ್ಲೇಖಿಸಲಾಗದು. ಇದು ಅರ್ಜಿದಾರರು ಮತ್ತು ದೂರುದಾರರ ನಡುವಿನ ಎಲ್ಲಾ ಕೃತ್ಯಗಳು ಸಮ್ಮತಿಯಿಂದ ಕೂಡಿವೆ ಎಂಬುದನ್ನು ಮಾತ್ರ ಸೂಚಿಸುತ್ತದೆ. ಅದರ ನಂತರವೂ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ವಿಚಾರಣೆ ನಡೆಸಲು ಅನುಮತಿಸಿದರೆ, ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ,” ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ

ಮಹಿಳೆ ಮತ್ತು ಯುವಕ ಡೇಟಿಂಗ್‌ ಆ್ಯಪ್‌ನಲ್ಲಿ ಒಂದು ವರ್ಷದಿಂದ ಸಂಪರ್ಕದಲ್ಲಿದ್ದರು. ಭೇಟಿಯಾಗಲು ನಿರ್ಧರಿಸಿ ರೆಸ್ಟೋರೆಂಟ್‌ನಲ್ಲಿಊಟ ಮಾಡಿದ್ದರು. ನಂತರ ಓಯೋ ರೂಮ್‌ಗೆ ಕರೆದೊಯ್ದ ಯುವಕ ಲೈಂಗಿಕ ಕ್ರಿಯೆಗೆ ಮುಂದಾದಾಗ ಒಪ್ಪಿಗೆ ನಿರಾಕರಿಸಿದ್ದಾಗಿ ಮಹಿಳೆ ದೂರಿನಲ್ಲಿತಿಳಿಸಿದ್ದಾರೆ. ಒಪ್ಪಿಗೆ ಹಿಂಪಡೆದ ಬಳಿಕವೂ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪ ಮಾಡಿದ್ದಾರೆ. ಆದರೆ, ಮರುದಿನ ಆಕೆಯ ಅಪಾರ್ಟ್‌ಮೆಂಟ್‌ಗೆ ಯುವಕನೇ ಡ್ರಾಪ್‌ ಮಾಡಿದ್ದಾನೆ. ಅದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ಮಹಿಳೆ ದೂರು ನೀಡಿದ್ದಾರೆ. ಆರೋಪ ಪಟ್ಟಿ ಸಲ್ಲಿಸಿದ್ದ ಕೋಣನಕುಂಟೆ ಪೊಲೀಸರು ಇನ್‌ಸ್ಟಾಗ್ರಾಂ ಚಾಟಿಂಗ್‌ ಪರಿಗಣಿಸಿರಲಿಲ್ಲ. ಇನ್‌ಸ್ಟಾಗ್ರಾಂನಲ್ಲಿಯುವಕ, ಮಹಿಳೆ ಕೆಟ್ಟ ಅಭಿರುಚಿಯ ಚಾಟಿಂಗ್‌ ಮಾಡಿದ್ದಾರೆ. ಪರಸ್ಪರ ಫೋಟೊ, ವಿಡಿಯೊಗಳನ್ನೂ ವಿನಿಮಯ ಮಾಡಿಕೊಂಡಿದ್ದಾರೆ. ಅವುಗಳನ್ನು ಪರಿಶೀಲಿಸಿದರೆ ಮಹಿಳೆಯ ದೂರು ಸುಳ್ಳೆಂದು ಸಾಬೀತಾಗುತ್ತದೆ,” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಮತ್ತು ಮಹಿಳೆ ನಡುವೆ ನಡೆದಿರುವ ಎಲ್ಲಾ ಕೃತ್ಯಗಳು ಸಂಪೂರ್ಣ ಒಪ್ಪಿಗೆಯ ಕೃತ್ಯಗಳಾಗಿವೆ. ಅರ್ಜಿದಾರರು ದೂರುದಾರರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಮತ್ತು ಅದನ್ನು ಒಪ್ಪಿಗೆಯ ಲೈಂಗಿಕತೆ ಎಂದು ಕರೆಯಲಾಗುವುದಿಲ್ಲ. ಮದುವೆ ಭರವಸೆಯ ಮೇಲೆ ಲೈಂಗಿಕತೆಯಲ್ಲಿತೊಡಗಿದರೂ ಅದಕ್ಕೆ ಬಿಎನ್‌ಎಸ್‌ ಶಿಕ್ಷೆ ಸೂಚಿಸುತ್ತದೆ. ಇದು ಮದುವೆ ಭರವಸೆಯ ಪ್ರಕರಣವಲ್ಲದಿದ್ದರೂ, ಅದು ಒಪ್ಪಿಗೆಯದ್ದಾಗಿರಲಿ ಅಥವಾ ಇಲ್ಲದಿರಲಿ ವಿಚಾರಣೆ ನಡೆಸಬೇಕಾಗಿದೆ. ಹಾಗಾಗಿ, ಪ್ರಕರಣ ರದ್ದುಗೊಳಿಸಬಾರದು ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದ್ದರು.

ಆದರೆ, ಅರ್ಜಿದಾರರ ಪರ ವಕೀಲರು, ”ಅತ್ಯಾಚಾರದ ಆರೋಪ ಸುಳ್ಳು. ಅನಗತ್ಯವಾಗಿ ತಮ್ಮ ವಿರುದ್ಧ ಆರೋಪ ಹೊರಿಸಲಾಗಿದೆ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು” ಎಂದು ಕೋರಿದ್ದರು.