Flash News

‘ಕೋತಿಗಳ ಗುಂಪಲ್ಲಿ ಕುಳಿತರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗುರುತೇ ಸಿಗುವುದಿಲ್ಲ’: ಅಖಿಲೇಶ್‌ ‘ಮಂಕಿ’ ಪ್ರತ್ಯುತ್ತರ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಅಪ್ಪು, ಪಪ್ಪು ಮತ್ತು ತಪ್ಪು’ ಎಂಬ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆದಿತ್ಯನಾಥ್ ಅವರು ಕೋತಿಗಳ ಗುಂಪಿನ ನಡುವೆ ಕುಳಿತರೆ ಯಾರೂ ಅವರನ್ನು ಗುರುತಿಸುವುದಿಲ್ಲ ಎಂದು ಹೇಳಿದ್ದಾರೆ.

‘ಜನರ ಮನಸ್ಸನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಬಿಜೆಪಿ ಗಾಂಧೀಜಿಯವರ ಮೂರು ಕೋತಿಗಳನ್ನು ನೆನಪಿಸಿಕೊಳ್ಳುತ್ತಿದೆ. ಆದರೆ, ಸತ್ಯ ಏನೆಂದರೆ ಅವರನ್ನು (ಯೋಗಿ ಆದಿತ್ಯನಾಥ್) ಕೋತಿಗಳ ಗುಂಪಿನ ನಡುವೆ ಕೂರಿಸಿದರೆ, ನೀವು ಅಥವಾ ನಾನು ಅವರನ್ನು ಗುರುತಿಸಲು ಆಗುವುದಿಲ್ಲ’ ಎಂದು ಮುಂಬರುವ ಬಿಹಾರ ಚುನಾವಣೆಗೆ ಮುಂಚಿತವಾಗಿ ಪ್ರಚಾರ ಮಾಡುವಾಗ ಯಾದವ್ ಹೇಳಿದರು.

ಇದಕ್ಕೂ ಮುನ್ನ, ಆದಿತ್ಯನಾಥ್ ಅವರು ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಮತ್ತು ಅವರ ಮಿತ್ರಪಕ್ಷಗಳಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ವಿರುದ್ಧ ತೀವ್ರ ದಾಳಿ ನಡೆಸಿದರು.

‘ಗಾಂಧೀಜಿಯವರ ಮೂರು ಮಂಗಗಳ ಬಗ್ಗೆ ನೀವು ತಿಳಿದಿರಲೇಬೇಕು. ಅವು ಕೆಟ್ಟದ್ದನ್ನು ಮಾತನಾಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ ಅಥವಾ ಕೆಟ್ಟದ್ದನ್ನು ನೋಡುವುದಿಲ್ಲ ಎನ್ನುವ ಅರ್ಥ ನೀಡುತ್ತವೆ. ಆದರೆ, ಇಲ್ಲಿರುವ ಮೂರು ಕೋತಿಗಳಾದ ಅಪ್ಪು, ಪಪ್ಪು ಮತ್ತು ತಪ್ಪು (ಅಖಿಲೇಶ್, ರಾಹುಲ್ ಮತ್ತು ತೇಜಸ್ವಿ) ಬಿಹಾರದ ಜನರಿಗೆ ಸುಳ್ಳು ಹೇಳಿ ಇಲ್ಲಿ ಜಂಗಲ್ ರಾಜ್ ಅನ್ನು ಪುನಃಸ್ಥಾಪಿಸಲು ಬಯಸುತ್ತವೆ’ ಎಂದು ಅವರು ಮುಜಫರ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.