Flash News

ಮಂಗಳೂರು: ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣ, 19 ವರ್ಷಗಳ ಬಳಿಕ ಆರೋಪಿಯ ಬಂಧನ

ಮಂಗಳೂರು: 2006ರ ಡಿಸೆಂಬರ್ 1ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ನಡೆದಿದ್ದ ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಅಬ್ದುಲ್ ಸಲಾಂ ಅಡ್ಡೂರು (ಕಿನ್ನಿಗೊಳಿ ನಿವಾಸಿ) ಅವರನ್ನು 19 ವರ್ಷಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

01.12.2006ರಂದು ಪ್ರಮುಖ ಆರೋಪಿ ಕಬೀರ್ ಮತ್ತು ಸಹಚರರು ಸುಖಾನಂದ್ ಶೆಟ್ಟಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ನಂತರ ಕಬೀರ್‌ಗೆ ಅಡ್ಡೂರು ಸಹೋದರರಾದ ಲತೀಫ್ (ಅಡ್ಡೂರು ಲತೀಫ್) ಹಾಗೂ ಅಬ್ದುಲ್ ಸಲಾಂ ಅವರು ತಮ್ಮ ಅಡ್ಡೂರು ಟಿಬೆಟ್ ಕಾಲೋನಿಯ ಮನೆಯಲ್ಲಿ 2 ದಿನಗಳ ಕಾಲ ಆಶ್ರಯ ನೀಡಿದ್ದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿ, ಕಬೀರ್ ಅವರನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟುಕೊಟ್ಟ ನಂತರ ಅಬ್ದುಲ್ ಸಲಾಂ ಅವರು ಕೃತ್ಯದ ಮೂರು ತಿಂಗಳಲ್ಲೇ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಆದರೆ ಇತ್ತೀಚೆಗೆ ದೇಶಕ್ಕೆ ಮರಳಿದ್ದ ಅವರನ್ನು 2025 ನವೆಂಬರ್ 18ರಂದು ಬಜಪೆ ಕಿನ್ನಿಪದವು ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2007ರಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡು ವಿದೇಶದಲ್ಲಿ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಬ್ದುಲ್ ಸಲಾಂ, ಅಡ್ಡೂರಿನ ಮನೆಯನ್ನು ನೆಲಸಮ ಮಾಡಿಸಿ ಬಜಪೆಯ ಕಿನ್ನಿಪದವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈತನ ಸಹೋದರ ಲತೀಫ್ ಇನ್ನೂ ವಿದೇಶದಲ್ಲೇ ತಲೆಮರೆಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ 16 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ 11 ಜನ ಇನ್ನೂ ತಲೆಮರೆಸಿಕೊಂಡಿದ್ದಾರೆ. ಅಬ್ದುಲ್ ಸಲಾಂ ಅವರ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ಮತ್ತು ರೌಡಿ ಶೀಟ್ ಇದೆ. ನ್ಯಾಯಾಲಯದಿಂದ ಹಲವು ಬಾರಿ ವಾರಂಟ್ ಹೊರಡಿಸಿರುವುದರಿಂದ ಕಲಂ 209 BNSS ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಸಹಾಯಕ ಪೊಲೀಸ್ ಆಯುಕ್ತ (ಉತ್ತರ) ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಬಜಪೆ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ ಈ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.