Flash News

ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ; ನಟಿ, ಮಾಡೆಲ್ ಸವಿತಾಬಾಯಿ ಬಂಧನ

ಇತ್ತೀಚೆಗೆ ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ. ಅಜ್ಗರ್ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡು ವಾರಗಳು ಕಳೆಯುತ್ತಿದೆ. ಈಗ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಬಂಧನ ಆಗಿದೆ. ಇವರು ಮಾಡೆಲ್ ಹಾಗೂ ನಟಿ ಕೂಡ ಆಗಿದ್ದರು. ಅವರ ಮೇಲೆ ಕೊಲೆಗೆ ಸಾಥ್ ನೀಡಿದ ಆರೋಪ ಇದೆ.

ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಈ ಮೊದಲು ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರು ಮಾಡೆಲ್ ಕೂಡ ಆಗಿದ್ದರು. ಮಾಡೆಲ್ ಆಗಿ ಕೆಲವು ಉತ್ಪನಗಳ ಪ್ರಚಾರ ಕೂಡ ಮಾಡಿದ್ದಾರೆ. ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ರೌಡಿ ಶೀಟರ್ ಖಾಲೀದ್ ಪೈಲ್ವಾನ್​ಗೆ ಸಾಥ್ ನೀಡಿದ ಆರೋಪ ಇವರ ಮೇಲೆ ಇದೆ.

ಘಟನೆ ಏನು?
ನವೆಂಬರ್ 10ರಂದು ಅಜ್ಗರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ‌ಮಾಡಿ ಕೊಲೆಗೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅಜ್ಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಒಂದಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಆ ಬಳಿಕ ಕೊಲೆಗೆ ಯತ್ನ ನಡೆಯಿತು. ಆದರೆ, ಕೊಲೆ ಪ್ರಯತ್ನ ವಿಫಲವಾಗಿದೆ. ಈ ರೀತಿ ಕೊಲೆಗೆ ಪ್ರಯತ್ನಿಸಿದ್ದು ಖಾಲೀದ್ ಪೈಲ್ವಾನ್. ಈಗ ಕೊಲೆಗೆ ಸಾಥ್ ನೀಡಿದ ಸವಿತಾ ಅರೆಸ್ಟ್ ಆಗಿದ್ದಾರೆ.

ವಿವಿಧ ಕಡೆ ಸುತ್ತಾಟ
ಪೊಲೀಸರ ಕೈಗೆ ಸಿಗಬಾರದು ಎನ್ನುವ ಕಾರಣಕ್ಕೆ ಕಳೆದ ಒಂದು ವಾರದಿಂದ ಆರೋಪಿ ಖಾಲೀದ್ ಹಾಗೂ ಸವಿತಾಬಾಯಿ ಬೆಂಗಳೂರು, ಗೋವಾ ಹಾಗೂ ದೆಹಲಿ ಸುತ್ತಾಡಿದ್ದರು. ಖಚಿತ ಮಾಹಿತಿ ಪಡೆದ ದಾವಣಗೆರೆ ಅಜಾದ್ ನಗರ ಪೊಲೀಸರು ಕಾಂಗ್ರೆಸ್ ನಾಯಕಿಯ ಬಂಧನ ಮಾಡಿದ್ದಾರೆ.