Flash News

ನಾನು ಯಾವಾಗಲೂ ಸಿಎಂ ರೇಸ್‌ನಲ್ಲಿ ಇರ್ತೀನಿ: ಪರಮೇಶ್ವರ್‌

ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದಾಗಲೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂತು. ಆದ್ರೆ ಯಾವತ್ತೂ ನಾನೊಬ್ಬನೇ ಪಕ್ಷವನ್ನ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಗೃಹಸಚಿವ ಪರಮೇಶ್ವರ್‌ ಹೇಳಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಪರೋಕ್ಷ ಟಾಂಗ್‌ ಕೊಟ್ಟರು.

ನಾಯಕತ್ವ ಬದಲಾವಣೆ ವಿಚಾರ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿದ್ದಾಗಲೂ ಪಕ್ಷ ಅಧಿಕಾರಕ್ಕೆ ಬಂತು. ನಾನೊಬ್ಬನೇ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಎಂದರು.

ಇನ್ನೂ ನೀವೂ ಸಿಎಂ ರೇಸ್‌ನಲ್ಲಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಯಾವಾಗಲೂ ರೇಸ್‌ನಲ್ಲಿ ಇರ್ತೀನಿ ಎಂದು ಪರೋಕ್ಷವಾಗಿ ಸಿಎಂ ಆಸೆ ಬಿಚ್ಚಿಟ್ಟರು.

ನಾನು ಯಾವಾಗಲೂ ರೇಸ್‌ನಲ್ಲಿರ್ತೀನಿ ಕಣ್ರೀ, ಅದೇನ್‌ ದೊಡ್ಡ ವಿಚಾರ ಅಲ್ಲ. 2013 ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. ಸರ್ಕಾರ ಅಧಿಕಾರಕ್ಕೆ ತಂದ್ವಿ, ನಾನೇ ಮಾಡಿದೆ, ನಾನೇ ಸರ್ಕಾರ ತಂದೆ ಅಂತ ಎಲ್ಲೂ ನಾನು ಹೇಳಿಕೊಳ್ಳಿಲ್ಲಪ್ಪ. ಎಲ್ರೂ ಸೇರಿ ಕೆಲಸ ಮಾಡಿದ್ವಿ, ಜನ ಕೈ ಹಿಡಿದ್ರು. ಆ ಸಂದರ್ಭದಲ್ಲಿ ನಾನು ಪರಾಭವ ಆದೆ. ಒಂದು ವೇಳೆ ನಾನು ಗೆದ್ದಿದ್ರೆ ಏನಾಗ್ತಿತ್ತೋ ಗೊತ್ತಿಲ್ಲ. ಆ ಸಂದರ್ಭದಲ್ಲೂ ಸಿಎಂ ರೇಸ್‌ನಲ್ಲಿ ನನ್ನ ಹೆಸರು ಇತ್ತು. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಆಗೋದಿಕ್ಕೆ ಒಂದು ಅವಕಾಶ ಕೊಡ್ತಾರೆ. ಅದು ಕೆಲವು ಸಂದರ್ಭಗಳಲ್ಲಿ ಆಗೋದಿಲ್ಲ ಎಂದರಲ್ಲದೇ, ಈಗ ಆ ಕನಸು ನನಸಾಗುತ್ತಾ ಎಂಬ ಪ್ರಶ್ನೆಗೆ, ಗೊತ್ತಿಲ್ಲಪ್ಪ, ನನಗೆ ಕನಸೇ ಬೀಳಲ್ಲ ಅಂತ ನಗೆಬೀರಿದರು