ಲಕ್ನೋ: ಪ್ರಿಯಕರನಿಗಾಗಿ ಗಂಡನನ್ನು ಕೊಂದು ಡ್ರಮ್ನಲ್ಲಿರಿಸಿ ಸಿಮೆಂಟ್ನಿಂದ ಸೀಲ್ ಮಾಡಿ ಸಿಕ್ಕಿ ಬಿದ್ದಿದ್ದ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಕೆಲ ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಮೀರತ್ನಲ್ಲಿ ಗಂಡನನ್ನು ಕೊಲೆ ಮಾಡಿ ಆತನ ದೇಹವನ್ನು ತುಂಡು ತುಂಡು ಮಾಡಿ ಡ್ರಮ್ನಲ್ಲಿ ತುಂಬಿಸಿ ಜೈಲು ಪಾಲಾಗಿದ್ದ ಆರೋಪಿ ಮುಸ್ಕಾನ್ ರಸ್ತೋಗಿ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. 27 ವರ್ಷದ ಯುವಕನನ್ನು ಆತನ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಂದಿದ್ದರು. ಬಳಿಕ ದೇಹವನ್ನು ಕತ್ತರಿಸಿ ಡ್ರಮ್ನೊಳಗಿಟ್ಟು ಸಿಮೆಂಟ್ನಿಂದ ಸೀಲ್ ಮಾಡಿದ್ದರು.
ಮೀರತ್ನಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸ್ವಲ್ಪ ಸಮಯದಲ್ಲೇ ಮುಸ್ಕಾನ್ ಗರ್ಭಿಣಿ ಎಂಬುದು ತಿಳಿದುಬಂದಿತ್ತು. ಇದೀಗ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯನ್ನು ಬಂಧಿಸಿದ ಎರಡು ದಿನಗಳ ಬಳಿಕ ಜೈಲಿನಲ್ಲಿರುವ ಮುಸ್ಕಾನ್ ಆರೋಗ್ಯ ಹದಗೆಟ್ಟಿತ್ತು. ಅಸ್ವಸ್ಥಳಾಗಿದ್ದ ಆಕೆಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಆಕೆ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಆಕೆಯ ಹೊಟ್ಟೆಯಲ್ಲಿರುವ ಮಗು ಆಕೆಯ ಗಂಡನದ್ದಾ ಅಥವಾ ಪ್ರಿಯಕರನದ್ದಾ ಎಂಬುದು ತಿಳಿದಿರಲಿಲ್ಲ.
ಮಾರ್ಚ್ 3ರಂದು ಪತಿ ಸೌರಭ್ ರಜಪೂತ್ನನ್ನು ಕೊಂದು ನಂತರ ಪ್ರಿಯಕರ ಸಾಹಿಲ್ ಜತೆ 11 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಸುತ್ತಾಡಿದ್ದಳು. ಭಾನುವಾರ ರಾತ್ರಿ 11.30 ರ ಸುಮಾರಿಗೆ ಮುಸ್ಕಾನ್ ಅವರ ಹೆರಿಗೆ ನೋವು ಹೆಚ್ಚಾದ ನಂತರ ಅವರನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ಕರೆತರಲಾಯಿತು ಎಂದು ಹಿರಿಯ ಜೈಲು ಸೂಪರಿಂಟೆಂಡೆಂಟ್ ಡಾ. ವಿರೇಶ್ ರಾಜ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ನವಜಾತ ಶಿಶುವಿನ ತೂಕ 2.4 ಕೆಜಿ ಇದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಮುಸ್ಕಾನ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಜೈಲು ಅಧೀಕ್ಷಕರು ತಿಳಿಸಿದ್ದಾರೆ. ಆದರೆ, ಕುಟುಂಬದಿಂದ ಯಾರೂ ಮುಸ್ಕಾನ್ ಅವರನ್ನು ಆಸ್ಪತ್ರೆಗೆ ಭೇಟಿ ನೀಡಲಿಲ್ಲ.
ಭದ್ರತಾ ವ್ಯವಸ್ಥೆಗಳ ಕುರಿತು ವಿಶೇಷ ಸೂಚನೆಗಳನ್ನು ನೀಡಲಾಗಿದೆ ಮತ್ತು ಕಾಲಕಾಲಕ್ಕೆ ವೈದ್ಯಕೀಯ ದಾಖಲೆಗಳನ್ನು ಸಹ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಯೋಜನೆ ಪ್ರಕಾರ, ಇಬ್ಬರು ಆರೋಪಿಗಳು ಶವವನ್ನು ಸೂಟ್ಕೇಸ್ನಲ್ಲಿ ಪ್ಯಾಕ್ ಮಾಡಿ ಎಸೆಯಲು ಬಯಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೂಟ್ಕೇಸ್ನಲ್ಲಿ ಮೂಳೆಯ ತುಂಡು ಕೂಡ ಪತ್ತೆಯಾಗಿತ್ತು.



