ನವದೆಹಲಿ: ನೇಮಕಾತಿ ಪತ್ರ ಪಡೆಯಲು ಬಂದ ಮುಸ್ಲಿಂ ವೈದ್ಯೆಯ ಹಿಜಾಬ್ ಹಿಡಿದೆಳೆದ ಬಿಹಾರ ಸಿಎಂ ನಿತೀಶ್ ಕುಮಾರ್ ಪರ ಕೇಂದ್ರ ಸಚಿವ ಗಿರಿರಾದ್ ಸಿಂಗ್ ಮಾತನಾಡಿದ್ದಾರೆ.
ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮೊನ್ನೆ ಸೋಮವಾರ ಪಾಟ್ನಾದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿಸಿದ ಸಚಿವ ಗಿರಿರಾಜ್ ಸಿಂಗ್, ಘಟನೆಯಿಂದ ಉಂಟಾದ ಆಘಾತದಿಂದಾಗಿ ಮಹಿಳೆ ಕೆಲಸ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಿದಾಗ ಪರವಾಗಿಲ್ಲ, ಅವರು ನರಕಕ್ಕೆ ಹೋಗಬಹುದು ಎಂದು ಉಡಾಫೆಯ ಉತ್ತರ ಕೊಟ್ಟಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಯಾರಾದರೂ ನೇಮಕಾತಿ ಪತ್ರವನ್ನು ಪಡೆಯಲು ಹೋದರೆ, ಅವರು ತಮ್ಮ ಮುಖವನ್ನು ತೋರಿಸಬೇಕಲ್ಲವೇ? ಇದು ಯಾವುದೋ ಇಸ್ಲಾಮಿಕ್ ದೇಶವೇ? ನಿತೀಶ್ ಕುಮಾರ್ ರಕ್ಷಕರಾಗಿ ವರ್ತಿಸಿದ್ದಾರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.
ನೀವು ಪಾಸ್ಪೋರ್ಟ್ ಪಡೆಯಲಿದ್ದರೆ, ನಿಮ್ಮ ಮುಖವನ್ನು ತೋರಿಸುವುದಿಲ್ಲವೇ, ನೀವು ವಿಮಾನ ನಿಲ್ದಾಣಕ್ಕೆ ಹೋದಾಗ, ನಿಮ್ಮ ಮುಖವನ್ನು ತೋರಿಸುವುದಿಲ್ಲವೇ, ಜನರು ಪಾಕಿಸ್ತಾನ ಮತ್ತು ಇಂಗ್ಲಿಷ್ಟನ್ ಬಗ್ಗೆ ಮಾತನಾಡುತ್ತಾರೆ, ಆದರೆ ಇದು ಭಾರತ. ಭಾರತದಲ್ಲಿ, ಕಾನೂನಿನ ನಿಯಮ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.
ನೇಮಕಾತಿಯನ್ನು ತಿರಸ್ಕರಿಸಿದ ಮಹಿಳೆಯ ಬಗ್ಗೆ ಕೇಳಿದಾಗ, ಆಕೆ ಕೆಲಸ ಸ್ವೀಕರಿಸಬೇಕೆ, ಅಥವಾ ನಿರಾಕರಿಸಿ ನರಕಕ್ಕೆ ಹೋಗಬೇಕೆ ಎಂಬುದು ಆಕೆಯ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.
ನನಗೆ ಮಾಹಿತಿಯಿಲ್ಲ
ಘಟನೆಯಿಂದಾಗಿ ವೈದ್ಯರು ನೇಮಕಾತಿ ಪತ್ರ ತಿರಸ್ಕರಿಸಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ.
ನನಗೆ ಅಂತಹ ಯಾವುದೇ ಮಾಹಿತಿ ಇಲ್ಲ, ನಮ್ಮ ಮುಖ್ಯಮಂತ್ರಿಗಳು ಮಹಿಳೆಯರನ್ನು ಯಾವಾಗಲೂ ಗೌರವಿಸುತ್ತಾರೆ, ಅವರು ಮಾತೃ ಶಕ್ತಿಯ ಸಬಲೀಕರಣಕ್ಕಾಗಿ ಅಪಾರ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆರೋಗ್ಯ ಸಚಿವರು ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡರು.
ಕೋಲ್ಕತ್ತಾದ ವೈದ್ಯೆ ನುಸ್ರತ್ ಪರ್ವೀನ್, ಸೋಮವಾರ ಮುಖ್ಯಮಂತ್ರಿ ಸಚಿವಾಲಯದಲ್ಲಿ ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಲು ಬಂದಿದ್ದ ಹತ್ತು ಆಯುಷ್ ವೈದ್ಯರಲ್ಲಿ ಒಬ್ಬರು.
ಪರ್ವೀನ್ ಸರದಿ ಬಂದಾಗ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈದ್ಯೆಯ ಹಿಜಾಬ್ ಕಡೆ ಬೆರಳು ತೋರಿಸಿ ಇದೇನು ಎಂದು ಕೇಳಿದರು. ನಂತರ ಅದನ್ನು ತೆಗೆದು ವೈದ್ಯೆಯ ಮುಖ ತೋರಿಸಿದರು.
ಈ ಘಟನೆಯು ಜಾಗತಿಕವಾಗಿ ಟೀಕೆಗೆ ಗುರಿಯಾಗಿದೆ, ಅನೇಕರು ನಿತೀಶ್ ಕುಮಾರ್ ಆರ್ಎಸ್ಎಸ್ ಕಾರ್ಯಸೂಚಿಗೆ ಅನುಗುಣವಾಗಿ ಮುಸ್ಲಿಂ ಸಂಪ್ರದಾಯಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ.



