Flash News

Mangalore | 22 ದೇಶಗಳನ್ನು ಮಣಿಸಿ ಗೆದ್ದ ಕುಡ್ಲದ ಚೆಲುವೆ, ಮಗನ ʼಮಮ್ಮಿʼ ಈಗ ‌ʼಮಿಸೆಸ್‌ ಅರ್ಥ್‌ ಇಂಟರ್‌ ನ್ಯಾಷನಲ್!

ಮಂಗಳೂರು: ಮನೆ, ಸಂಸಾರ, ಮಗ, ಉದ್ಯಮವನ್ನೂ ನಿಭಾಯಿಸುತ್ತಾ, ಮಾಡೆಲಿಂಗ್ ಜಗತ್ತಿನಲ್ಲಿ ಛಾಪು ಮೂಡಿಸಿದ ಮಂಗಳೂರಿನ ಬೆಡಗಿಯೋರ್ವರು ಫಿಲಿಫೈನ್ಸ್​​ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಕ್ರೌನ್ ಮುಡಿಗೇರಿಸಿದ್ದಾರೆ.

ಮಂಗಳೂರಿನ ಚಿತ್ರಾಪುರದಲ್ಲಿ ಸೂಪರ್ ಮಾರ್ಕೆಟ್ ಉದ್ಯಮಿಯಾಗಿರುವ ವಿದ್ಯಾ ಸಂಪತ್ ಈ‌ ಸಾಧನೆ ಮಾಡಿದವರು. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ವಿವಿಧ ರೌಂಡ್‌ಗಳ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಡಿ. 2 ರಿಂದ ಡಿ.10ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ. ಈ ಸ್ಪರ್ಧೆಯಲ್ಲಿ 22 ದೇಶದ ಇತರ ಸ್ಪರ್ಧಿಗಳು ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ‌ ಅವರು ಮೊದಲ ಸ್ಥಾನ ಪಡೆದು‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ವಿದ್ಯಾ ಸಂಪತ್ ಪಾತ್ ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸಲೂನ್​ನ ಮರ್ಸಿನಿಂದ ತರಬೇತಿ ಪಡೆದುಕೊಂಡಿದ್ದಾರೆ. ಮುಂಬೈನಲ್ಲಿ ಹುಟ್ಟಿದ್ದರೂ, ಸದ್ಯ ಮಂಗಳೂರು ವಾಸಿಯಾಗಿರುವ ವಿದ್ಯಾ ಸಂಪತ್ ಫ್ಯಾಷನ್ ಲೋಕದತ್ತ ಆಕರ್ಷಿತರಾಗಿ ಅಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಟ್ಯಾಲೆಂಟ್ ಸುತ್ತು, ನ್ಯಾಷನಲ್ ಕಾಸ್ಟ್ಯೂಮ್ ರೌಂಡ್ ಹೀಗೆ ಟಫ್ ಕಾಂಪಿಟೇಷನ್ ಇತ್ತು. ಇವರು ನ್ಯಾಷನಲ್ ಕಾಸ್ಟ್ಯೂಮ್​ಗೆ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ತಾವರೆ ಹೂವಿನ ಸಂಕೇತವಿರುವ ವಸ್ತ್ರ ವಿನ್ಯಾಸ ಮಾಡಿಕೊಂಡಿದ್ದರು. ಜೊತೆಗೆ ಕಸದಿಂದ ರಸ ಪರಿಕಲ್ಪನೆಯಲ್ಲಿ ಬಳಸಿ ಎಸೆದಿರುವ ಟಿನ್​ಗಳಿಂದಲೇ, ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಈ ಮೂಲಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ತುಳುನಾಡಿನ ಸಂಸ್ಕೃತಿಯ ಸಂಕೇತವುಳ್ಳ ಪ್ರತಿಮೆಯನ್ನು ಬೇರೆ ಬೇರೆ ರಾಷ್ಟ್ರಗಳ 22 ಮಂದಿ ಸ್ಪರ್ಧಿಗಳಿಗೆ ನೀಡಿದ್ದಾರೆ.