ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ಎಂಟೂವರೆ ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ. ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು.
ಯಾಕೆಂದರೆ, ಅಂಬರೀಶ್ ಅವರಿಗೆ ಇಬ್ಬರನ್ನೂ ಮತ್ತೆ ಜೊತೆಯಾಗಿ ನೋಡಬೇಕೆಂಬ ಹೆಬ್ಬಯಕೆ ಇತ್ತು. ಆದರೆ ಕೊನೆಯವರೆಗೆ ಅದಾಗಲೇ ಇಲ್ಲ. ಹಾಗಂಥ ಇಬ್ಬರನ್ನೂ ಜೊತೆಯಲ್ಲಿ ನೋಡಲೇಬೇಕು ಎಂಬ ಅಭಿಮಾನಿಗಳ ಮಹದಾಸೆ ಏನೂ ಕಮರಿರಲಿಲ್ಲ. ಇಂದಲ್ಲ.. ನಾಳೆ.. ಆ ಕಾಲ ಕೂಡಿ ಬರುತ್ತೆ. ವೈಮನಸ್ಸು.. ಹಗೆತನ.. ದ್ವೇಷ ಮರೆತು ಇಬ್ಬರು ಒಂದಾಗಿಯೇ ಆಗುತ್ತಾರೆ ಎಂದು ಹಲವರು ಕಾಯುತ್ತಲೇ ಇದ್ದರು.
ಆದರೆ, ಬಹುಶಃ ಕಾಲ ಮಿಂಚಿ ಹೋದಂತೆ ಇದೆ. ಇಂತಹದ್ದೊಂದು ಸುಳಿವನ್ನು ಇತ್ತೀಚೆಗೆ ನಡೆದ ಬೆಳವಣಿಗೆಗಳು ನೀಡುತ್ತಿವೆ.
ಹೌದು.. ಹುಬ್ಬಳ್ಳಿಯಲ್ಲಿ ನಿನ್ನೆ (ಡಿಸೆಂಬರ್ 20) “ಮಾರ್ಕ್” ಮೆರವಣಿಗೆ ನಡೆಯಿತು. ಅಭಿಮಾನದ ಜಾತ್ರೆಯಲ್ಲಿ ಮಿಂದೆದ್ದ ಸುದೀಪ್ ಇದೇ ವೇಳೆ ನೆರೆದ ಜನಸ್ತೋಮ ಉದ್ದೇಶಿಸಿ ಮಾತನಾಡಿದರು. ಯುದ್ಧ ಘೋಷ ಮೊಳಗಿಸಿದರು.
ಡಿಸೆಂಬರ್ 25ಕ್ಕೆ ಚಿತ್ರಮಂದಿರದಲ್ಲಿ “ಮಾರ್ಕ್” ಬಿಡುಗಡೆಯಾಗುತ್ತಿದೆ. ಆದರೆ ಇದೇ ಸಮಯದಲ್ಲಿ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ ಎಂದು ಹೇಳಿದ ಸುದೀಪ್ ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ, ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ ಎಂದು ಹೇಳಿದರು.
ಮುಂದುವರೆದು ಕೆಲವೊಮ್ಮೆ ನನಗೆ ಅನ್ನಿಸುತ್ತದೆ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗಾಗಿ, ನನ್ನ ಸ್ನೇಹಿತರು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು ಎಂದು ಹೇಳಿದ ಸುದೀಪ್ ನಾವೆಲ್ಲರೂ ಒಳ್ಳೆಯ ಹೆಸರು ಪಡೆಯಬೇಕು ಎಂಬ ಒಂದೇ ಕಾರಣಕ್ಕೆ ನಾನು ಬಾಯಿ, ಎಲ್ಲವನ್ನು ಮುಚ್ಚಿಕೊಂಡು ಇದ್ದೇ ಹೊರತು, ನನಗೆ ಬಾಯಿ ಇಲ್ಲ ಅಂತಲ್ಲ ಎಂದು ಮಾತನಾಡಿದರು.
ಹೀಗಾಗಿಯೇ ಸುದೀಪ್ ವಿರುದ್ಧ ಮತ್ತೆ ದರ್ಶನ್ ಅಭಿಮಾನಿಗಳು ಇಂದು ಬೆಳ್ಳಿಗ್ಗೆಯಿಂದಲೇ ಸಿಡಿದೆದ್ದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಮರ ಶುರುಮಾಡಿದ್ದರು. ಈ ಸಮರಕ್ಕೀಗ ವಿಜಯಲಕ್ಷ್ಮಿ ದರ್ಶನ್ ಕೂಡ ಧುಮುಕಿದ್ದಾರೆ. ಸುದೀಪ್ ಹೆಸರೇಳದೇ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಹೌದು ದರ್ಶನ್ ಅನುಪಸ್ಥಿತಿಯಲ್ಲಿ “ಡೆವಿಲ್” ಚಿತ್ರದ ಪ್ರಚಾರದ ಹೊಣೆ ಹೊತ್ತಿರುವ ವಿಜಯಲಕ್ಷ್ಮಿ ಸದ್ಯ ವಿಜಯಯಾತ್ರೆ ಮಾಡುತ್ತಿದ್ದಾರೆ. ಚಿತ್ರಮಂದಿರಗಳಿಗೆ ತೆರಳಿ ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿದ್ದಾರೆ.
ಹೀಗೆ ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರಕ್ಕೆ ಬಂದಿದ್ದ ವಿಜಯಲಕ್ಷ್ಮಿ ಅಭಿಮಾನಿಗಳ ಸಮ್ಮುಖದಲ್ಲಿ ಗುಡುಗಿದ್ದಾರೆ.
ಈ ಕುರಿತು ಮಾತನಾಡಿರುವ ವಿಜಯಲಕ್ಷ್ಮಿ , ದರ್ಶನ್ ಅವರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ. ವೇದಿಕೆ ಮೇಲೆ , ಚಾನೆಲ್ ಗಳಲ್ಲಿ ಕುತ್ಕೊಂಡು, ಅಲ್ಲಿ ಇಲ್ಲಿ ಮಾತಾಡ್ತಾರೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಅವರ ಬಗ್ಗೆ ಅವರ ಫ್ಯಾನ್ಸ್ ಬಗ್ಗೆ ಏನೇನೋ ಮಾತಾಡ್ತಾ ಇರ್ತಾರೆ ಎಂದು ಹೇಳಿರುವ ವಿಜಯಲಕ್ಷ್ಮಿ ಆದರೆ ಅದೇ ದರ್ಶನ್ ಅವರು ಇದ್ದಾಗ ಇವರೆಲ್ಲ ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ದರ್ಶನ್ ಅವರು ಇದ್ದಾಗ ಇವರೆಲ್ಲ ಎಲ್ಲಿ ಮಾಯ ಆಗಿರ್ತಾರೆ ಎನ್ನೋದೇ ಗೊತ್ತಾಗಲ್ಲ ಎಂದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ವಿಜಯಲಕ್ಷ್ಮಿ, ದರ್ಶನ್ ಹೇಳಿದಂತೆ ಯಾರೇ ಏನೇ ಅಂದರು ಯಾರು ಕೂಡ ಕೋಪ ಮಾಡ್ಕೋಬೇಡಿ, ಬೇಜಾರ್ ಮಾಡ್ಕೋಬೇಡಿ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಗೆ ಪರೋಕ್ಷವಾಗಿ ದರ್ಶನ್ ಪತ್ನಿ ತಿರುಗೇಟು ನೀಡಿದ್ದಾರೆ.



