Flash News

ನನ್ನ ಭಾಷಣದ ಕಾರಣಕ್ಕೆ ಒಂದೇ ಒಂದು ಗಲಾಟೆ, ಸಂಘರ್ಷ ಆಗಿದ್ದು ಇದೆಯಾ?: ಶರಣ್ ಪಂಪ್ವೆಲ್

ಮಂಗಳೂರು : ನನ್ನ ಭಾಷಣದ ಕಾರಣಕ್ಕೆ ಒಂದೇ ಒಂದು ಗಲಾಟೆ, ಸಂಘರ್ಷ ಆಗಿದ್ದು ಇದೆಯಾ..? ನನ್ನ ಭಾಷಣ ಕೇಳಿ ಯಾರು ಕೂಡ ಪೊಲೀಸ್ ಜೀಪಿಗೆ ಬೆಂಕಿ ಹಾಕಲ್ಲ, ಪೊಲೀಸರಿಗೆ ಕಲ್ಲು ಬಿಸಾಕಿದ್ದು ಇಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಲ್ಲ, ದೇಶ ವಿರೋಧಿ ಘೋಷಣೆ ಹಾಕುವ ತುಕ್ಡೇ ಗ್ಯಾಂಗ್ ನಿರ್ಮಾಣವಂತೂ ಆಗಲ್ಲ, ಬಜರಂಗದಳ ರೀತಿಯ ದೇಶಭಕ್ತರ ಸಂಘಟನೆ ಸೃಷ್ಟಿಯಾಗಬಹುದು ವಿನಾ ಯಾರೂ ದೇಶ ವಿರೋಧಿ ಘೋಷಣೆ ಕೂಗಲ್ಲ. ನನ್ನ ಭಾಷಣದ ಕಾರಣಕ್ಕೆ ಗಲಾಟೆಯಾಗುತ್ತೆ ಎಂದು ಈಗ ಸರ್ಕಾರ, ಪೊಲೀಸರು ನಿರ್ಬಂಧ ಹೇರುತ್ತಿದ್ದಾರೆ. ಇದನ್ನು ನಾವು ಪ್ರಶ್ನೆ ಮಾಡಲೇಬೇಕಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದಾರೆ.

ಕದ್ರಿ ಮೈದಾನದಲ್ಲಿ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದ ಸಂದರ್ಭದಲ್ಲಿ ತನ್ನ ಮೇಲೆ ಸರ್ಕಾರ ಕೆಲವು ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಮಾಡಿರುವುದರ ಬಗ್ಗೆ ಪ್ರಶ್ನೆ ಮಾಡಿದರು. ಇವತ್ತು ಹಿಂದುತ್ವದ ಬಗ್ಗೆ ಜಗತ್ತಿನಾದ್ಯಂತ ಜನರು ಚರ್ಚೆ ಮಾಡುತ್ತಿದ್ದಾರೆ, ಹಿಂದು ಧರ್ಮ ಯಾವಾಗ ಹುಟ್ಟಿತೆಂದು ಯಾರಿಗೂ ಗೊತ್ತಿಲ್ಲ. ಸಾವಿರಾರು ವರ್ಷಗಳ ಹಿಂದೆ ಜನ ಯಾವ ರೀತಿ ಜೀವನ ಮಾಡಬೇಕೆಂದು ತಿಳಿಸಿದ್ದು ಭಾರತ. ನಮ್ಮ ಕುಟುಂಬ ಪದ್ಧತಿ, ತಾಯಿಗೆ ನೀಡಿರುವ ಶ್ರೇಷ್ಠತೆ, ಮಕ್ಕಳ ಜೊತೆಗಿನ ಸಂಬಂಧ ಬಗ್ಗೆ ಹೇಳಿದ್ದು ಭಾರತ. ಈಗ ಪಾಶ್ಚಾತ್ಯರು ಹೇಳುತ್ತಿರುವ ವೈದ್ಯಕೀಯ ಪದ್ಧತಿಯನ್ನು ನಮ್ಮವರು ಆಗಲೇ ಅನುಷ್ಠಾನಕ್ಕೆ ತಂದಿದ್ದರು. ನಮ್ಮಲ್ಲಿ ಕೃಷ್ಣ, ಗಣಪತಿ, ಜೀಸಸ್, ಅಲ್ಲಾ, ಪೈಗಂಬರನನ್ನೂ ಆರಾಧನೆ ಮಾಡುತ್ತೇವೆ. ದೇವ ಒಬ್ಬನೇ ನಾಮ ಹಲವು ಎನ್ನುವುದು ಭಾರತೀಯರು ಹೇಳಿದ್ದು. ನಮ್ಮದು ಒಂದು ಕುಟುಂಬ ಅಲ್ಲ, ಜಗತ್ತೇ ಕುಟುಂಬ ಎಂದು ಹೇಳಿದ್ದು ನಾವು.

ಆದರೆ ನಾವು ಹಿಂದುತ್ವ ಅಂದರೆ ಮುಸ್ಲಿಮರ ವಿರೋಧಿ ಅಂತ ತೋರಿಸುತ್ತಾರೆ. ಸುಪ್ರೀಂ ಕೋರ್ಟ್ ಕೂಡ ಹಿಂದು ಧರ್ಮ ಅಂದರೆ ಜೀವನ ಪದ್ಧತಿ ಎಂದು ಹೇಳಿದೆ. ಹಿಂದುತ್ವಕ್ಕಿಂತ ದೊಡ್ಡ ಜಾತ್ಯತೀತತೆ ಇದೆಯಾ? ಯಾರು ಕೂಡ ನಮ್ಮ ಜೊತೆಗೆ ಇರಬಹುದು ಎಂದಿದ್ದು ನಮ್ಮ ಹಿಂದು ಧರ್ಮ‌. ವ್ಯಾಪಾರಕ್ಕೆಂದು ಬಂದವರಿಗೂ ನಮ್ಮ ಪೂರ್ವಜರು ಅವಕಾಶ ಕೊಟ್ಟರು, ಪ್ರಾರ್ಥನೆಗೆ ಜಾಗ ಕೇಳಿದ್ದಕ್ಕೆ ಅದನ್ನೂ ಮಾಡಿಕೊಟ್ಟರು, ಈಗ ದೇಶಾದ್ಯಂತ ಲಕ್ಷಾಂತರ ಪ್ರಾರ್ಥನಾ ಕೇಂದ್ರಗಳಿದ್ದು ಪ್ರತಿ ಶುಕ್ರವಾರ ಪ್ರಾರ್ಥನೆ ಮಾಡುತ್ತಿದ್ದಾರೆ. ಅದಕ್ಕೇನಾದರೂ ತೊಂದರೆ ಆಗಿದೆಯಾ, ಚರ್ಚ್ ನಲ್ಲಿ ಪ್ರಾರ್ಥನೆ ಆಗ್ತಾ ಇದೆ, ಅಲ್ಲಿ ಸಮಸ್ಯೆ ಆಗಿದೆಯಾ, ನಾವೆಲ್ಲ ಒಟ್ಟಿಗಿರೋಣ ಅಂತ ಹೇಳಿದ್ದೇ ಹಿಂದು ಧರ್ಮ. ಆದರ ನಮ್ಮ ಹಿಂದು ಧರ್ಮವನ್ನೇ ನಾಶ ಮಾಡಲು ಹುನ್ನಾರ ನಡೆಸುತ್ತಿದ್ದಾರೆ.

ತಮಿಳುನಾಡಿನ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯು ಮಲೇರಿಯಾ ರೀತಿಯಲ್ಲಿ ನಿರ್ಮೂಲನೆ ಮಾಡಬೇಕೆಂದು ಹೇಳುತ್ತಾರೆ. ಎಲ್ಲ ಒಟ್ಟಿಗೆ ಇರೋಣ ಎನ್ನುವ ಸನಾತನ ಧರ್ಮ ಡೆಂಗ್ಯು ಮಲೇರಿಯಾ ಆಗುತ್ತಾ.. ಭಾರತದಲ್ಲಿ ಭಗವಂತನನ್ನು ನೋಡಲು ವಿದೇಶದಿಂದ ಅಮರನಾಥ ಯಾತ್ರೆಗೆ ಬರ್ತಾರೆ. ಗಂಗಾನದಿಗೆ ಸ್ನಾನಕ್ಕೆ ಬರ್ತಾರೆ. ಸನಾತನ ಧರ್ಮ ಯಾವಾಗ ಹುಟ್ಟಿದ್ದು ಅಂತ ಗೊತ್ತಿಲ್ಲ, ನಾಶ ಮಾಡುವುದಕ್ಕೂ ಆಗಲ್ಲ. ಇದು ಮೃತ್ಯುಂಜಯ ಸಮಾಜ ಎಂದು ಹೇಳಿದರು ಶರಣ್.

1925ರಲ್ಲಿ ಡಾಕ್ಟರ್ ಜೀ ಹಿಂದು ಧರ್ಮದ ಬಗ್ಗೆ ಕಲ್ಪನೆ ಇಟ್ಟುಕೊಂಡು ಸಂಘ ಸ್ಥಾಪನೆ ಮಾಡಿದ್ದರು. ಒಂದು ಶಾಖೆಯಿಂದ ಆರಂಭಗೊಂಡದ್ದು ಈಗ ದೇಶದ 80 ಸಾವಿರ ಕಡೆ ಶಾಖೆ ಆಗ್ತಾ ಇದೆ, ಆಗ ದೇಶಕ್ಕೆ ಜೈ ಹಾಕಲು ಯೋಚನೆ ಮಾಡುವ ಕಾಲ ಇತ್ತು. ಈಗ ಪ್ರತಿ ಮನೆಯಲ್ಲು ರಾಷ್ಟ್ರೀಯತೆಯ ಉದ್ದೀಪನ ಆಗಿದೆ. ಸಂಘ ಶಾಖೆಯಲ್ಲಿ ಕಬಡ್ಡಿ ಆಡುವುದನ್ನು , ದೇಶಭಕ್ತಿ ಉದ್ದೀಪನಕ್ಕಾಗಿ ಹಾಡುಗಳನ್ನು ಹೇಳಿಕೊಟ್ಟಿದ್ದರು. ಈಗ ಸಂಘದಿಂದ ಬಂದ ವ್ಯಕ್ತಿಯೊಬ್ಬರು ಪ್ರಧಾನಿಯಾಗಿ ಬೇರೆ ದೇಶಗಳ ಜೊತೆಗೆ ಕಬಡ್ಡಿ ಆಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.

ಕಾಶ್ಮೀರ ನಮ್ಮಿಂದ ಬೇರೆಯಾಗುವ ಸ್ಥಿತಿಯಾಗಿತ್ತು. ಅಲ್ಲಿನ ಜನ ಬೇರೆ ಕಡೆಗೆ ಮದುವೆಯಾಗಲು ಅವಕಾಶ ಇರಲಿಲ್ಲ. ಅಲ್ಲಿಗೆ ಇತರೇ ಭಾರತೀಯರು ಹೋಗುವುದಕ್ಕೆ ಹೆದರುತ್ತಿದ್ದರು. ಅಂಥ ಕಾಶ್ಮೀರದ ವಿಶೇಷ ಸ್ಥಾನಮಾನವನ್ನೇ ತೆಗೆದುಬಿಟ್ಟರು. ದೇಶದೊಳಗೆ ಪ್ರತ್ಯೇಕತೆ ಇರಬಾರದು ಎಂದೇ ಈ ಕೆಲಸ ಮಾಡಿದ್ದರು.‌

ಉತ್ತರ ಕರ್ನಾಟಕದಲ್ಲಿ ಜಾತಿ ಕಾರಣಕ್ಕೆ ಸಮಸ್ಯೆ ಇದೆ, ನಮ್ಮದೇ ಸಮಾಜದವನನ್ನು ದೇವಸ್ಥಾನ, ಮನೆಗಳಿಂದ ಹೊರಗಿಡುತ್ತೇವೆ. ಮುಸ್ಲಿಂ ಮತ್ತೊಬ್ಬ ಮನೆಗೆ ಬಂದರೆ ಮರ್ಯಾದೆ ಕೊಡುತ್ತೇವೆ. ನಮ್ಮ ಸಮಾಜದ ಹುಡುಗಿಯನ್ನು ಬೇರೊಬ್ಬ ಮದುವೆಯಾದ್ರೆ ಮರ್ಯಾದೆ ಹತ್ಯೆ ಆಗುತ್ತದೆ‌. ಯಾಕೆ ಈ ರೀತಿ ಆಗುತ್ತಿದೆ, ಅವರೂ ನಮ್ಮವರೇ ಅಲ್ವಾ.. ಮನುಷ್ಯರೇ ಅಲ್ವಾ.. ಜಾತಿ ಕಾರಣಕ್ಕೆ ಹೊರಗಿಡುವುದು ಮನುಷ್ಯ ವಿರೋಧಿಯಲ್ಲವೇ. ಹಿಂದು ಧರ್ಮದ ಒಳಗಿನ ಜಾತಿ ಪದ್ಧತಿಯ ಭೇದ ಅಳಿಸುವುದನ್ನು ಸಂಘ ಮಾಡುತ್ತಿದೆ. ಸಂಘದೊಳಗೆ ಬಂದವರೆಲ್ಲ ಒಂದೇ ಎನ್ನುವ ಭಾವದೊಳಗೆ ಬರುತ್ತಾರೆ ಎಂದು ಶರಣ್ ಪಂಪ್ವೆಲ್ ಹೇಳಿದರು.‌