ರಾಂಚಿ (ಜಾರ್ಖಂಡ್): ದೇಶದ ಅತಿದೊಡ್ಡ ನಕ್ಸಲ್ ನಾಯಕ ಹಾಗೂ ಮಾವೋವಾದಿ ಸಂಘಟನೆಯ ಎರಡನೇ ಪ್ರಮುಖ ಕಮಾಂಡರ್ ಆಗಿದ್ದ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ದಾ ಇಂದು ನಿಧನರಾಗಿದ್ದಾರೆ. 80 ವರ್ಷದ ಬೋಸ್ ಕಳೆದ 4 ವರ್ಷದಿಂದ ಜಾರ್ಖಂಡ್ನ ಜೈಲಿನಲ್ಲಿದ್ದರು. ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಕಳೆದ ವಾರವಷ್ಟೇ ಗೃಹ ಮಂತ್ರಿ ಅಮಿತ್ ಶಾ ಅವರು ಭಾರತ ದೇಶವನ್ನು ನಕ್ಸಲ್ ಮುಕ್ತ ದೇಶವೆಂದು ಘೋಷಿಸಿದ್ದರು. ಇದೀಗ ಪ್ರಶಾಂತ್ ಬೋಸ್ ಸಾವು ನಕ್ಸಲ್ ಸಂಘಟನೆಯ ತಲೆಯೇ ಉರುಳಿದಂತಾಗಿದೆ. ಪ್ರಶಾಂತ್ ಬೋಸ್ರನ್ನು 2021ರಲ್ಲಿ ಜಾರ್ಖಂಡ್ನ ಸರಾಯ್ಕೆಲಾದಲ್ಲಿ ಭದ್ರತಾ ಪಡೆಗಳು ಬಂಧಿಸಿದ್ದವು. ಆ ಬಂಧನದ ಬಳಿಕ ಪ್ರಶಾಂತ್ ಬೋಸ್ ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ಇನ್ನು ಅಂದಿನ ಡಿಜಿಪಿ ನೀರಜ್ ಸಿನ್ಹಾ ಅವರ ಮಾಹಿತಿ ಪ್ರಕಾರ, ಪ್ರಶಾಂತ್ ಬೊಸ್ ಬಂಧನದ ಬಳಿಕ ನಡೆದ ತನಿಖೆಯಲ್ಲಿ ಮಾವೋವಾದಿ ಸಂಘಟನೆಯ ಬಗ್ಗೆ ಅತ್ಯಾಂತ ಆಳವಾದ ಹಾಗೂ ವಿಸ್ತಾರವಾದ ಮಾಹಿತಿಯನ್ನು ಒದಗಿಸಿದ್ದರು. ಈ ಪ್ರಶಾಂತ್ ಬೋಸ್ರನ್ನು ಮಾವೋವಾದಿ ಸಂಘಟನೆಯ ಜನಕ ಎಂದು ಕರೆಯಲಾಗಿತ್ತು. ಜಾರ್ಖಂಡ್ ಸೇರಿದಂತೆ ಬಿಹಾರ, ಒಡಿಶಾ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢದಲ್ಲಿ ಪ್ರಶಾಂತ್ ಬೋಸ್ ಮೇಲೆ ಹಲವು ಪ್ರಕರಣಗಳಿವೆ.
ಪುಣೆಯ ಭೀಮಾ ಕೋರೆಂಗಾವದದ ಹಿಂಸಾಚಾರದ ಪ್ರಕರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪ್ರಶಾಂತ್ ಬೋಸ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎನ್ಐಎ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.



